ಗುಡಿಸಲಿನಲ್ಲಿ 4 ಮರಿಗಳಿಗೆ ಜನ್ಮ ಕೊಟ್ಟ ಚಿರತೆ, ಜನರಿಗೆ ಹತ್ತಿರವೂ ಸುಳಿಯಗೊಡುತ್ತಿಲ್ಲ ತಾಯಿ ಚಿರತೆ! ನೋಡಿ ಈ ವಿಡಿಯೋ
ವನ್ಯ ಮೃಗಗಳು ಅಪ್ಪಿ ತಪ್ಪಿ ನಗರಗಳ ಕಡೆ ಬಂದರೆ ಇಲ್ಲಿನ ಜನರು ಅವುಗಳನ್ನು ನೋಡಿದಾಗ ಅದು ದೊಡ್ಡ ಸಂಚಲನವನ್ನು ಸೃಷ್ಟಿಸಿ ಬಿಡುತ್ತದೆ. ಸಾಮಾನ್ಯವಾಗಿ ಜಿಂಕೆ, ಆನೆಯಂತಹ ಪ್ರಾಣಿಗಳ ಬಂದಾಗಲೇ ಅಂಜುವ ಜನರ ನಡುವೆ ಕ್ರೂರ ಮೃಗಗಳು ಎನಿಸಿರುವ ಹುಲಿ, ಸಿಂಹ, ಚಿರತೆಗಳಂತವು ಬಂದರೆ ಜನರ ಪರಿಸ್ಥಿತಿ ಏನಾಗಬಹುದು ಎಂದು ಊಹಿಸಲು ಕೂಡಾ ಸಾಧ್ಯವಿಲ್ಲ. ಆದರೆ ಇಂತಹುದೊಂದು ಘಟನೆ ಕೆಲವು ದಿನಗಳ ಹಿಂದೆ ನಡೆದಿದ್ದು, ಅದು ದೊಡ್ಡ ಸುದ್ದಿಯಾಗಿದೆ. ಈ ಘಟನೆಯಲ್ಲಿ ಚಿರತೆಯೊಂದು ಜನ ವಾಸವಿರುವ ಕಡೆ ಬಂದಿದೆ. ಹಾಗಾದರೆ ಏನು ಈ ಚಿರತೆಯ ಕಥೆ ಎಂದು ತಿಳಿಯೋಣ ಬನ್ನಿ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಇಗತ್ಪುರಿ ಎನ್ನುವ ಪ್ರದೇಶದಲ್ಲಿ, ಹೆಣ್ಣು ಚಿರತೆಯೊಂದು ಮಂಗಳವಾರ ಗುಡಿಸಲಿನೊಳಗೆ ನಾಲ್ಕು ಮರಿಗಳಿಗೆ ಜನ್ಮವನ್ನು ನೀಡಿದೆ. ಚಿರತೆ ಜನ್ಮ ನೀಡಿದ ಈ ಎಳೆಯ ಮರಿಗಳ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಜನರ ಗಮನವನ್ನು ಸೆಳೆದಿದೆ. ಚಿರತೆ ಮರಿಗಳಿಗೆ ಜನ್ಮ ನೀಡಿದ ನಂತರ ಅವುಗಳ ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ. ಚಿರತೆ ಮರಿಗಳನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲು ಅರಣ್ಯ ಇಲಾಖೆ ಈಗ ಕಾಯುತ್ತಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಾ ಸಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿ ಗಣೇಶ್ರಾವ್ ಜೋಲ್ ಅವರು ಮಾದ್ಯಮಗಳಿಗೆ ಈ ವಿಷಯವನ್ನು ತಿಳಿಸುತ್ತಾ, ‘ಹೆಣ್ಣು ಚಿರತೆ ಇಗತ್ಪುರಿಯ ಗುಡಿಸಲಿನಲ್ಲಿ ನಾಲ್ಕು ಮರಿಗಳಿಗೆ ಜನ್ಮವನ್ನು ನೀಡಿದೆ. ಚಿರತೆ ಜನ್ಮ ನೀಡಿರುವ ಎಲ್ಲಾ ನಾಲ್ಕು ಮರಿಗಳು ಕೂಡಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿವೆ. ಅವುಗಳನ್ನು ನಾವು ಬೇರೆ ಸ್ಥಳಕ್ಕೆ ಕೊಂಡೊಯ್ಯುವ ಅವಶ್ಯಕತೆ ಇದ್ದು, ಎಳೆಯ ಮರಿಗಳ ಕಾರಣದಿಂದಾಗಿ ಚಿರತೆಯನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲವೆಂದು ಅವರು ತಿಳಿಸಿದ್ದಾರೆ. ಸಮಾಚಾರ ಮಾದ್ಯಮಗಳಲ್ಲಿ ಒಂದಾದ ಎಎನ್ಐ ಈ ವೀಡಿಯೋವನ್ನು ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಗುಡಿಸಲಿನಲ್ಲಿ ಚಿರತೆ ಮರಿಗಳೊಂದಿಗೆ ಇರುವುದನ್ನು ನಾವು ಕೂಡಾ ನೋಡಬಹುದಾಗಿದೆ.
ವಿಡಿಯೋ ನೋಡಿ….
#WATCH Maharashtra: A leopard gave birth to four cubs inside a hut in Igatpuri area of Nashik yesterday. Forest Official says, "all the cubs are healthy and safe." (Video Source: Forest Department) pic.twitter.com/AMA5xXLNHJ
— ANI (@ANI) August 18, 2020
ಈ ವೀಡಿಯೊವನ್ನು ಆಗಸ್ಟ್ 19 ರ ಬೆಳಿಗ್ಗೆ ಟ್ವಿಟರ್ ನಲ್ಲಿ ಶೇರ್ ಮಾಡಲಾಗಿದೆ. ವೀಡಿಯೋ ಶೇರ್ ಆದ ನಂತರ ಅದು ಇದುವರೆವಿಗೂ 1.2 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸುಮಾರು 14 ಸಾವಿರ ಲೈಕ್ ಗಳು ಮತ್ತು 2 ಸಾವಿರ ರೀಟ್ವೀಟ್ ಗಳನ್ನು ಪಡೆದುಕೊಂಡಿದೆ. ಚಿರತೆ ಮರಿಗಳನ್ನು ನೋಡಿಡ ಟ್ವಿಟರ್ ಬಳಕೆದಾರರು ಮರಿಗಳು ಬಹಳ ಮುದ್ದಾಗಿವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೇ ಮಾನವ-ಪ್ರಾಣಿಗಳ ನಡುವೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿರುವ ಸಂಘರ್ಷಗಳ ಬಗ್ಗೆ ಅನೇಕರು ತಮ್ಮ ಪ್ರತಿಕ್ರಿಯೆಗಳ ಮೂಲಕ ಕಳವಳವನ್ನು ಹಾಗೂ ಪರಿಸರ ಕಾಳಜಿಯನ್ನು ಹೊರಹಾಕಿದ್ದಾರೆ.
ರಣಥಂಬೋರ್ ನ ರಾಷ್ಟ್ರೀಯ ಉದ್ಯಾನವನದ ಪ್ರಕಾರ, ಭಾರತೀಯ ಚಿರತೆಯು ಐಯುಸಿಎನ್ ಕೆಂಪು ಪಟ್ಟಿಯಲ್ಲಿ ನಮೂದಿಸಲ್ಪಟ್ಟಿರುವ ನಶಿಸಿ ಹೋಗುತ್ತಿರುವ ಚಿರತೆಯ ಜಾತಿಯಾಗಿದೆ, ಏಕೆಂದರೆ ವರ್ಷಗಳು ಕಳೆದಂತೆ ಸಂಖ್ಯೆಯು ಕಡಿಮೆಯಾಗುತ್ತಿದೆ. ಈ ಚಿರತೆಗಳು ತಮ್ಮ ಚರ್ಮ ಹಾಗೂ ಅವುಗಳ ಶರೀರದ ಇತರೆ ಭಾಗಗಳಾಗಿ ಭೇಟೆಗಾರರಿಗೆ ಬಲಿಯಾಗುತ್ತಿವೆ ಎನ್ನಲಾಗಿದೆ. ಅಲ್ಲದೇ ಕೃಷಿ ಅಭಿವೃದ್ಧಿ ಕಾರ್ಯಗಳಿಂದ ಕೂಡಾ ಇವುಗಳ ಆವಾಸಸ್ಥಾನವು ನಷ್ಟವಾಗುತ್ತಿದ್ದು, ಅವುಗಳ ಅಸ್ತಿತ್ವಕ್ಕೆ ತೊಂದರೆಯಾಗಿದೆ ಎನ್ನಲಾಗಿದೆ.