ಆಟಗಾರರನ್ನು ಟ್ರ್ಯಾಕ್ ಮಾಡುವ ಡಿವೈಸ್ ನಲ್ಲಿನ ದೋಷವೇ ಬಯೋ ಬಬಲ್‌ ನಲ್ಲಿರುವ ಆಟಗಾರರಿಗೂ ಸೋಂಕು ತಗುಲಲು ಕಾರಣವಾಗಿದ್ದು!

ಸತತ ಆಟಗಾರರಿಗೆ ಸೋಂಕು ತಗುಲಿರುವುದು ಕಂಡುಬಂದ ನಂತರ ಬಿಸಿಸಿಐ ಐಪಿಎಲ್ 2021 ರ ಉಳಿದ ಪಂದ್ಯಗಳನ್ನು ಅನಿರ್ದಿಷ್ಟ ಕಾಲ ಮುಂದೂಡಿದೆ. ಅಲ್ಲದೆ ಪಂದ್ಯಾವಳಿಯಲ್ಲಿ ಆಟಗಾರರ ಚಲನವಲನಗಳನ್ನು ಪತ್ತೆಹಚ್ಚುವ ಜಿಪಿಎಸ್ ಸಾಧನಗಳ ಬಗ್ಗೆ ಸಂಶಯ ಕಂಡುಬಂದಿದೆ, ಜೊತೆಗೆ ಇವುಗಳ ಕೊರತೆ ಕೂಡ ಇತ್ತು. ಐಪಿಎಲ್ ರದ್ದಾಗಲು ಇದೇ ಪ್ರಮುಖ ಕಾರಣ.

ಇಂಡಿಯನ್ ಪ್ರೀಮಿಯರ್ ಲೀಗ್ (IPL 2021) ನ 14 ನೇ ಋತುವಿನಲ್ಲಿ ಕೊರೊನ ದಾಳಿಗೆ ಸಿಲುಕಿ ಸಸ್ಪೆಂಡ್ ಆಯ್ತು. ಐಪಿಎಲ್ ಬಯೋ ಬಬಲ್‌ ನಲ್ಲಿ ಸುರಕ್ಷಿತವೆಂದು ಪರಿಗಣಿಸಲ್ಪಟ್ಟ ಕ್ರಿಕೆಟಿಗರು ಸಹ ಕರೋನಾ ವೈರಸ್‌ ಸೋಂಕಿಗೆ ಒಳಗಾದರು. ಸೋಮವಾರ ಐಪಿಎಲ್ ತಂಡದ ಕೆಕೆಆರ್ನ ಇಬ್ಬರು ಆಟಗಾರರು ಪಂದ್ಯದ ಮೊದಲು ಕರೋನಾ ಸೋಂಕಿಗೆ ಒಳಗಾಗಿದ್ದರು. ಇದರ ನಂತರ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹಾಯಕ ಸಿಬ್ಬಂದಿಯ 2 ಸದಸ್ಯರು ಸಹ ಕರೋನಾ ಪಾಸಿಟಿವ್ ಎಂದು ಕಂಡುಬಂದಿತು.

ಇದರ ನಂತರ ಪಂದ್ಯಾವಳಿಯ ಮುಂದುವರಿಕೆ ಸಂಶಯವಾಯಿತು. ಮಂಗಳವಾರ ದೆಹಲಿ ಕ್ಯಾಪಿಟಲ್ಸ್ ನ ಅಮಿತ್ ಮಿಶ್ರಾ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ ರವರಿಗೂ ಕೂಡ ಸೋಂಕು ತಗುಲಿರುವುದು ಕಂಡುಬಂದಿದೆ. ಒಂದೇ ಸಲಕ್ಕೆ ಹೀಗೆ ಆಟಗಾರರಿಗೆ ಸೋಂಕು ತಗುಲಿರುವುದು ಕಂಡುಬಂದ ನಂತರ ಬಿಸಿಸಿಐ ಐಪಿಎಲ್ 2021 ರ ಉಳಿದ ಪಂದ್ಯಗಳನ್ನು ಅನಿರ್ದಿಷ್ಟವಾಗಿ ಮುಂದೂಡಿದೆ.

ಡಿವೈಸ್ ದೋಷ :
ಕಳೆದ ವರ್ಷ ಯುಎಇಯಲ್ಲಿ ನಡೆದ ಪಂದ್ಯಾವಳಿಯಲ್ಲಿ ರಚಿಸಲಾದ ಬಯೋ-ಬಬಲ್‌ನಲ್ಲಿ ಆಟಗಾರರ ಚಲನವಲನಗಳನ್ನು ಪತ್ತೆಹಚ್ಚಲು ಜಿಪಿಎಸ್ ಸಾಧನವನ್ನು ಧರಿಸಬೇಕಾಗಿತ್ತು. ಅಲ್ಲಿ ಬಿಸಿಸಿಐ ಇವುಗಳನ್ನು ಒದಗಿಸಿತ್ತು. ಐಪಿಎಲ್ 2021 ರಲ್ಲಿ ಆಟಗಾರರಿಗೆ ಕೂಡ ಇದೇ ರೀತಿಯ ಸಾಧನವನ್ನು ನೀಡಲಾಯಿತು. ಈ ಸಾಧನವನ್ನು ಆಟಗಾರರು ಮತ್ತು ಫ್ರ್ಯಾಂಚೈಸ್‌ ನ ಇತರ ಸದಸ್ಯರು ಸೇರಿದಂತೆ ಸಪೋರ್ಟ್ ಸಿಬ್ಬಂದಿ ಎಲ್ಲಾ ಸಮಯದಲ್ಲೂ ಧರಿಸಬೇಕಾಗಿತ್ತು.

ಆದರೆ ಈ ಡಿವೈಸ್ ದೋಷಪೂರಿತವಾಗಿದ್ದವು ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಈ ಸಾಧನವು ಸರಿಯಾದ ಡೇಟಾವನ್ನು ನೀಡುತ್ತಿಲ್ಲ ಎಂದು ಸ್ವತ ಫ್ರಾಂಚೈಸಿಗಳು ದೂರಿದ್ದರು. ವರದಿಯ ಪ್ರಕಾರ, ಈ ಟ್ರ್ಯಾಕಿಂಗ್ ಸಾಧನವು ರಿಸ್ಟ್‌ಬ್ಯಾಂಡ್‌ನಂತಿದೆ, ಇದು ಬ್ಲೂಟೂತ್ ಮೂಲಕ ಮೊಬೈಲ್ ಫೋನ್‌ ನಲ್ಲಿನ ಅಪ್ಲಿಕೇಶನ್‌ಗೆ ಸಂಪರ್ಕ ಹೊಂದಿರುತ್ತದೆ.

ಈ ಸಾಧನವು ಆಟಗಾರ ಅಥವಾ ಫ್ರ್ಯಾಂಚೈಸ್‌ನ ಸದಸ್ಯರು ಎಲ್ಲಿಗೆ ಹೋಗುತ್ತಿದ್ದಾರೆ ಎಂಬುದನ್ನು ಟ್ರ್ಯಾಕ್ ಮಾಡುತ್ತದೆ. ಅಲ್ಲದೆ ಈ ಸಾಧನದ ಮೂಲಕ, ಯಾರೂ ಬಯೊ ಬಬಲ್ ಹೊರಗೆ ಹೋಗಿಲ್ಲವೇ ಎಂದು ಸಹ ಕಂಡುಹಿಡಿಯಬಹುದು. ಆದಾಗ್ಯೂ ಈ ಸಾಧನವು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದಿಲ್ಲ ಎಂದು ಹೇಳಲಾಗುತ್ತಿದೆ.

ಫ್ರ್ಯಾಂಚೈಸೀ ಒಂದು ನಗರದಿಂದ ಮತ್ತೊಂದು ನಗರಕ್ಕೆ ಪ್ರಯಾಣಿಸುತ್ತಿದ್ದಾಗ, ಹಿಂದಿನ ನಗರದಲ್ಲಿನ ಚಟುವಟಿಕೆಗಳನ್ನು ಮಾತ್ರ ಟ್ರ್ಯಾಕ್ ಮಾಡಲಾಗುತ್ತಿತ್ತು. ಬೇರೆ ನಗರಕ್ಕೆ ಹೋಗುವ ಡೇಟಾವನ್ನು ಅದರಲ್ಲಿ ಪತ್ತೆ ಮಾಡಲಾಗುತ್ತಿರಲಿಲ್ಲ. ಆಗೆಲ್ಲ ಸಾಧನದ ಬ್ಯಾಟರಿಯನ್ನು ಬದಲಾಯಿಸಬೇಕಾಗಿತ್ತು ಎಂದು ಹೇಳಲಾಗುತ್ತಿದೆ.

ಹೀಗಾದಾಗ ತುಂಬಾ ಜನ ಆಟಗಾರರು ಹಾಗೂ ಇತರೆ ಸಿಬ್ಬಂದಿ ಬಯೊಬಬಲ್ ಮುರಿದು ಆಚೆ ಹೋಗಿರುವ ಸಂಭವವಿದೆ. ಆ ಕಾರಣಕ್ಕೇ ಒಂದೇ ಸಲಕ್ಕೆ ಹೀಗೆ ತಂಡಗಳಲ್ಲಿ ಸೋಂಕು ವ್ಯಾಪಿಸಿದೆ. ನೂರಾರು ಕೋಟಿಗಟ್ಟಲೆ ಖರ್ಚು ಮಾಡುವ ಟೂರ್ನಿಯಲ್ಲಿ ಒಳ್ಳೆ ಡಿವೈಸ್ ಒದಗಿಸಿದ್ದರೆ ಹೀಗಾಗುತ್ತಿರಲಿಲ್ಲ. ಅದೂ ಅಲ್ಲದೇ ಎಷ್ಟೋ ಸಿಬ್ಬಂದಿಗೆ ಡಿವೈಸ್ ಕೊಟ್ಟಿರಲೇ ಇಲ್ಲ!

ಬಿಸಿಸಿಐ ನಡೆ ಕುರಿತು ಪ್ರಶ್ನೆ :
ಬಯೊ ಬಬಲ್ ಮತ್ತು ಟ್ರ್ಯಾಕಿಂಗ್ ಸಾಧನಗಳಲ್ಲಿನ ಅಡಚಣೆಗಳ ನಂತರ ಬಿಸಿಸಿಐನ ಸನ್ನದ್ಧತೆಯನ್ನು ಪ್ರಶ್ನಿಸಲಾಗುತ್ತಿದೆ. ಈಗ ಐಪಿಎಲ್ ಮುಂದೂಡಿದ ನಂತರ, ಭಾರತದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಬಗ್ಗೆ ಅನುಮಾನದ ಮೂಡಿದೆ. ದೇಶದಲ್ಲಿ ಕರೋನಾದ ಪರಿಸ್ಥಿತಿ ಹೀಗೇ ಇದ್ದರೆ, ಅಕ್ಟೋಬರ್‌ನಲ್ಲಿ ಈ ವಿಶ್ವಕಪ್ ಅನ್ನು ಹೇಗೆ ಆಯೋಜಿಸಲು ಸಾಧ್ಯ?

ಮತ್ತೊಂದೆಡೆ ಐಪಿಎಲ್ ಮುಂದೂಡಿದ ಕಾರಣ ಬಿಸಿಸಿಐ ಕೂಡ ಸಮಸ್ಯೆಗಳನ್ನು ಎದುರಿಸಲಿದೆ. ಇನ್ನು ಮೇಲೆ ಅಂತರರಾಷ್ಟ್ರೀಯ ಕ್ರಿಕೆಟ್ ಅನ್ನು ನಿರಂತರವಾಗಿ ಆಡಬೇಕಾಗಿದೆ ಆದ್ದರಿಂದ ಐಪಿಎಲ್ ನ ಉಳಿದ ಪಂದ್ಯಗಳನ್ನು ಅವುಗಳ ನಡುವೆ ಸಂಘಟಿಸಲು ಕಷ್ಟಕರವಾಗಿರುತ್ತದೆ. ಬಹುಶ ಅದು ಸಾಧ್ಯವಾಗಲಾರದು.
-Team Infotrend